ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜುಲೈ ಮೊದಲನೇ ಅಥವಾ ಎರಡನೇ ವಾರದಲ್ಲಿ ಅದ್ದೂರಿಯಾಗಿ ಪತ್ರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಲಾಗಿದೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸ್ಥಾನದ ಜಿಲ್ಲಾ ಉಪಾಧ್ಯಕ್ಷ ರಾಜು ಬಿ.ಆರ್. ಅವರು ಈ ನಿರ್ಧಾರವನ್ನು ಪ್ರಕಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಅವರ ಅನುಪಸ್ಥಿತಿಯಲ್ಲಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ಬಿ.ಆರ್. ಅವರು, "ನಮ್ಮ ನಾಯಕ ಶಿವಾನಂದ ತಗೂಡೂರು ಅವರು ಮೂರನೇ ಬಾರಿಗೆ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಶುಭ ಸಂದರ್ಭದಲ್ಲಿ ಅವರಿಗೆ ಅದ್ದೂರಿ ಸನ್ಮಾನ ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಜಿಲ್ಲೆಯ ಅರ್ಹ ಪತ್ರಕರ್ತರಿಗೆ ದತ್ತಿ ನಿಧಿ ಪ್ರಶಸ್ತಿ ವಿತರಣೆ ಮಾಡಲಾಗುವುದು," ಎಂದು ತಿಳಿಸಿದರು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರಿಗೆ ಕ್ರೀಡಾಕೂಟ, ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ನಿರ್ಣಯಿಸಲಾಯಿತು. ಈ ಎಲ್ಲ ಕಾರ್ಯಕ್ರಮಗಳ ಯಶಸ್ವಿ ನಿರ್ವಹಣೆಗಾಗಿ ವಿವಿಧ ಉಪ ಸಮಿತಿಗಳನ್ನು ರಚಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಯಿತು.
ಇದೇ ವೇಳೆ, ಯಶಸ್ವಿ ಚಿಕಿತ್ಸೆ ಪಡೆದು ಪ್ರಸ್ತುತ ವಿಶ್ರಾಂತಿ ಪಡೆಯುತ್ತಿರುವ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಅವರು ಬೇಗ ಗುಣಮುಖರಾಗಿ, ಸಂಘದ ಚುಕ್ಕಾಣಿ ಹಿಡಿದು ಎಂದಿನಂತೆ ಕಾರ್ಯನಿರ್ವಹಿಸಲಿ ಎಂದು ಸಭೆಯಲ್ಲಿದ್ದವರೆಲ್ಲರೂ ಪ್ರಾರ್ಥಿಸಿದರು. ಸಂಘದ ಸರ್ವ ಸದಸ್ಯರ ಸಹಕಾರ, ಪ್ರೋತ್ಸಾಹ ಹಾಗೂ ಶುಭ ಹಾರೈಕೆಗಳು ಯಾವಾಗಲೂ ಅವರೊಂದಿಗೆ ಇರಲಿವೆ ಎಂದು ಆಶಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ನಾಗರಾಜ ಅವರು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿದರು. ವೇದಿಕೆಯ ಮೇಲೆ ಕೇಂದ್ರ ಸ್ಥಾನದ ಜಿಲ್ಲಾ ಕಾರ್ಯದರ್ಶಿ ರುದ್ರಗೌಡ ಪಾಟೀಲ್ ಉಪಸ್ಥಿತರಿದ್ದರು.
ಸಭೆಯಲ್ಲಿ ಹಿರಿಯ ಸದಸ್ಯರಾದ ಜಿ.ಎಸ್. ಗೋನಾಳ್, ಎಚ್.ಎಸ್. ಹರೀಶ್, ಎಂ. ಸಾದಿಕ್ ಅಲಿ, ಎನ್.ಎಂ. ದೊಡ್ಡಮನಿ, ಶಿವರಾಜ್ ನುಗಡೋಣಿ, ಕಲೀಲ್ ಊಡೇವು, ಧರ್ಮಣ್ಣ ಹಟ್ಟಿ, ಬ್ರಹ್ಮಾನಂದ ಬಡಿಗೇರ್, ಮಂಜುನಾಥ್ ಗೊಂಡಬಾಳ, ಶಿವಕುಮಾರ್ ಹಿರೇಮಠ, ಸಿದ್ದು ಹಿರೇಮಠ, ಎಂ.ಎನ್. ಕುಂದಗೋಳ, ಮಂಜುನಾಥ ಪೂಜಾರ್, ಉಮೇಶ್ ಪೂಜಾರ್, ಮೌಲಹುಸೇನ್ ಬುಲ್ಡಿಯಾರ್ ,ಅಂಜಿನೆಪ್ಪ, ಸೇರಿದಂತೆ ಜಿಲ್ಲೆಯ ಪ್ರಮುಖ ಪತ್ರಕರ್ತರು ಉಪಸ್ಥಿತರಿದ್ದರು.
