ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಗದಗ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜನೆ ಮಾಡಲಾಗಿದ್ದು, ಗುರುವಾರ ನಗರದ ಪತ್ರಿಕಾ ಭವನದಲ್ಲಿ ರೂರಲ್ ಕಿಂಗ್ಸ್ ತಂಡದ ಲೋಗೋ, ಪ್ರೋಮೋ ಹಾಗೂ ಜರ್ಸಿ ಅನಾವರಣ ಮಾಡಲಾಯಿತು.
ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಅಬ್ಬಿಗೇರಿ, ಪತ್ರಕರ್ತರು ಸದಾ ಒತ್ತಡದಿಂದ ಕಾರ್ಯಪ್ರವೃತ್ತರಾಗಿರುತ್ತಾರೆ. ಒತ್ತಡಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಈ ಎಲ್ಲಾ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಹಾಗೂ ಆಟಗಾರರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಯ ವರದಿಗಾರ ಹಾಗೂ ವಿನ್ನರ್ಸ್ ತಂಡದ ಮಾಲಕರಾದ ಅನಂತ ಕಾರ್ಕಳ ಮಾತನಾಡಿ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಒತ್ತಡದಿಂದ ಹೊರಗೆ ಬರಲು ಸಾಧ್ಯವಾಗುತ್ತದೆ. ಜೊತೆಗೆ ಸದೃಢ ಆರೋಗ್ಯಕ್ಕಾಗಿ ಕ್ರೀಡೆಗಳ ಅವಶ್ಯಕತೆ ಇದೆ. ಆ ನಿಟ್ಟಿನಲ್ಲಿ ಮಾಧ್ಯಮ ಕ್ರಿಕೆಟ್ ಲೀಗ್ ಆಯೋಜಿಸಿದ್ದು ಉತ್ತಮ ಬೆಳವಣಿಗೆ. ಜಿಲ್ಲೆಯಾಧ್ಯಂತ ಇರುವ ಮಾಧ್ಯಮ ಮಿತ್ರರು ಒಂದೇ ವೇದಿಕೆಯಲ್ಲಿ ಆಡುತ್ತಿರುವುದರಿಂದ ಬಾಂಧವ್ಯಗಳು ಮತ್ತಷ್ಟು ವೃದ್ಧಿಯಾಗುತ್ತವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಕ್ತ ವರ್ಷ ಆಯೋಜಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ತಾಲೂಕ ಮಟ್ಟದಲ್ಲಿ ಪತ್ರಕರ್ತರು ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಮುಂದುವರೆದ ಭಾಗವಾಗಿ ಜಿಲ್ಲಾ ಮಟ್ಟದಲ್ಲಿ ಗದಗ ನಗರದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಎಲ್ಲ ತಂಡದ ಆಟಗಾರರು ಸ್ಪರ್ಧಾತ್ಮಕವಾಗಿ ಭಾಗವಹಿಸಿ ಮಾದರಿ ಆಟಗಾರರು ಆಗಬೇಕು ಎಂದು ಕಿವಿಮಾತು ಹೇಳಿದರು.
ಕ್ರಿಕೆಟ್ ಲೀಗ್ ನಂತಹ ಕಾರ್ಯಕ್ರಮಗಳಿಂದ ಮಾಧ್ಯಮ ಮಿತ್ರರೆಲ್ಲರೂ ಒಂದು ಕಡೆ ಸೇರಲು ಅವಕಾಶ ಸಿಕ್ಕಂತಾಗಿದೆ. ಪ್ರತಿನಿತ್ಯ ಒತ್ತಡದ ನಡುವೆ ಇಂತಹ ವಿನೂತನ ಕಾರ್ಯಕ್ರಮಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಇಂತಹ ಹಲವಾರು ಕಾರ್ಯಕ್ರಮಗಳು ನಡೆಯಲಿ. ಸಂಘದ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇದ್ದೇ ಇರುತ್ತದೆ.
ಜಗದೀಶ್ ಎಸ್.ಪಿ
ಸಂಪಾದಕರು, ರತ್ನಾಕರವಾಣಿ ಕನ್ನಡ ದಿನಪತ್ರಿಕೆ, ರೂರಲ್ ಕಿಂಗ್ಸ್ ಮಾಲಕರು
ಕಾರ್ಯಕ್ರಮದ ನಿರೂಪಣೆಯನ್ನು ನೈಟ್ ರೈಡರ್ಸ್ ತಂಡದ ಮಾಲಕರಾದ ಆನಂದಯ್ಯ ವೀರಕ್ತಮಠ ಮಾಡಿದರು. ಈ ವೇಳೆ ಎಚ್.ಎಮ್ ಶರೀಫನವರ, ದೇವಪ್ಪ ಲಿಂಗದಾಳ, ಸುನೀಲ ತೆಂಬದಮನಿ, ರವಿಕಾಂತ ಅಂಗಡಿ, ಟಿ. ಎನ್ ಭಾಂಡಗೆ, ಶರಣು ದೊಡ್ಡೂರ, ಅರಣಕುಮಾರ ಹಿರೇಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.