ಸಂಡೂರು. ಜು. 27 : ಮಾತಿನ ಮೂಲಕ ಮನವೊಲಿಸುವ ಕಲೆ ಎಂದರೆ ಪದಗಳು, ಸ್ವರ ಮತ್ತು ದೇಹ ಭಾಷೆಯ ಶಕ್ತಿಯನ್ನು ಬಳಸಿಕೊಂಡು ಇತರರ ಮೇಲೆ ಪ್ರಭಾವ ಬೀರುವ ಮತ್ತು ಸ್ಫೂರ್ತಿ ನೀಡುವ ಸಾಮರ್ಥ್ಯ ಇಂದು ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರು ಈ ಕೌಶಲ್ಯವನ್ನು ರೂಢಿಸಿಕೊಳ್ಳಬೇಕು ಎಂದು
ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ್ ಬಸಾಪೂರ ಕರೆ ನೀಡಿದರು.
ಅವರು ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಘಟಕ ಮತ್ತು ಬಿ.ಕೆ.ಜಿ. ಸಂಸ್ಥೆಯ ಸಹಯೋಗದಲ್ಲಿ ನಡೆದ ನಿರೂಪಣೆ, ವೇದಿಕೆ ಕೌಶಲ್ಯಗಳು ಮತ್ತು ಮಾತನಾಡುವ ಕಲೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ
ಇಂದಿನ ಸ್ಪರ್ಧಾತ್ಮಕ ಹಾಗೂ ಸಂವಹನ ಪ್ರಧಾನ ಯುಗದಲ್ಲಿ ನಿರೂಪಣೆ, ವೇದಿಕೆ ಕೌಶಲ್ಯಗಳು ಮತ್ತು ಮಾತನಾಡುವ ಕಲೆ ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಅಗತ್ಯವಾದ ಕೌಶಲ್ಯಗಳಾಗಿವೆ. ಜ್ಞಾನ, ಪ್ರತಿಭೆ ಮತ್ತು ಸಾಮರ್ಥ್ಯ ಇದ್ದರೂ ಅವುಗಳನ್ನು ಪರಿಣಾಮಕಾರಿಯಾಗಿ ಇತರರಿಗೆ ತಲುಪಿಸುವ ಸಾಮರ್ಥ್ಯವಿಲ್ಲದಿದ್ದರೆ ಯಶಸ್ಸು ಸೀಮಿತವಾಗುತ್ತದೆ. ಆದ್ದರಿಂದ ವ್ಯಕ್ತಿಯ ಆಲೋಚನೆ, ಜ್ಞಾನ ಮತ್ತು ಭಾವನೆಗಳನ್ನು ಸ್ಪಷ್ಟವಾಗಿ, ಸುಂದರವಾಗಿ ಹಾಗೂ ಪರಿಣಾಮಕಾರಿಯಾಗಿ ವ್ಯಕ್ತಪಡಿಸುವ ಈ ಕಲೆಗೆ ವಿಶೇಷ ಮಹತ್ವವಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೇಖಕರಾದ ಡಾ. ಸಿ. ಆರ್. ಗೋಪಾಲ್ ಯಾವುದೇ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ, ಅರ್ಥಪೂರ್ಣವಾಗಿ ಮತ್ತು ಆಕರ್ಷಕವಾಗಿ ನಡೆಸಿಕೊಡುವ ಕಲೆಯೇ ನಿರೂಪಣೆಯಾಗಿದ್ದು, ನಿರೂಪಕ ಕಾರ್ಯಕ್ರಮದ ಸಹಾಯಕನಾಗಿದ್ದು, ಅದರ ಯಶಸ್ಸಿಗೆ ಕಾರಣನಾಗಿರುತ್ತಾನೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ವಿನೋದ್ ಎಂ. ನಿರೂಪಣೆ, ವೇದಿಕೆ ಕೌಶಲ್ಯಗಳು ಮತ್ತು ಮಾತನಾಡುವ ಕಲೆಗಳು ವ್ಯಕ್ತಿಯ ಯಶಸ್ಸಿನ ಸಾಧನಗಳಾಗಿವೆ ಎಂದು ತಿಳಿಸಿದರು. ಪ್ರಾಯೋಗಿಕವಾಗಿ ಅನೇಕ ವಿಷಯಗಳನ್ನು ಉದಾಹರಣೆ ಸಮೇತ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ. ನಾಗನಗೌಡ
ವೇದಿಕೆಯ ಮೇಲೆ ಆತ್ಮವಿಶ್ವಾಸದಿಂದ ನಿಂತು ಮಾತನಾಡುವುದು, ತನ್ನ ವಿಚಾರಗಳನ್ನು ವ್ಯಕ್ತಪಡಿಸುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿಯೊಬ್ಬರು ಈ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ಕೆ.ಜಿ. ಸಂಸ್ಥೆಯ ಅಧಿಕಾರಿ ಗೋಪಾಲ್ ಯು., ಅನೇಕ ಸಂಸ್ಥೆಗಳ ಪದಾಧಿಕಾರಿಗಳು, ಕ.ಸಾ.ಪ. ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ಶಾಲಾ-ಕಾಲೇಜುಗಳ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.