ಬಾಗಲಕೋಟೆ: ಜುಲೈ ೨೯: ತಾಲೂಕಿನ ಮುಚಖಂಡಿ ಗ್ರಾಮದ ಸರ್ಕಾರಿ ಶಾಲೆಗೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಮಂಗಳವಾರ ಭೇಟಿ ನೀಡಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡವನ್ನು ಪರಿಶೀಲಿಸಿ, ತೆರವಿಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನಾ ವೇಳೆ ಕಟ್ಟಡದ ಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಹಳೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಮಯದಲ್ಲಿ ಬೀಳುವ ಸ್ಥಿತಿಯಲ್ಲಿದೆ. ಕೂಡಲೇ ವಿದ್ಯಾರ್ಥಿಗಳ ಸುರಕ್ಷತೆಯ ಹಿತದೃಷ್ಠಿಯಿಂದ ನಿಯಮಾನುಸಾರ ತೆರವುಗೊಳಿಸಿ, ಕೈಗೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯ ಪಕ್ಕ ಕೆರೆ ಇದ್ದು, ಶಾಲೆಗೆ ಕಂಪೌಂಡ್ ಗೋಡೆ ಇಲ್ಲದ ಪ್ರಯುಕ್ತ ಅಲ್ಲಿ ಸಾಕಷ್ಟು ಜಾಲಿ ಹಾಗೂ ಇತರೆ ಗಡಿಗಳು ಬೆಳೆದಿದ್ದು, ಇದರಿಂದ ಮಕ್ಕಳಿಗೆ ಅಪಾಯವಾಗುವ ಸಂಭವಿರುವುದನ್ನು ಮನಗಂಡು ಶಾಲಾ ಮಕ್ಕಳಿಗೆ ಆಟದ ಮೈದಾನ ಹಾಗೂ ಕಂಪೌಂಡ್ ಅವಶ್ಯಕತೆಯಿದೆ. ಈ ಕುರಿತು ತ್ವರಿತವಾಗಿ ಕ್ರಮಕೈಗೊಳ್ಳಲು ತಿಳಿಸಿದರು. ಈ ವೇಳೆ ಶಾಲೆಯ ಮೇಲೆ ಹೈಟೆನ್ಶನ್ ವಿದ್ಯುತ್ಚ್ಛಕ್ತಿ ಲೈನ್ ಹಾಯ್ದು ಹೋಗಿದ್ದು, ತಕ್ಷಣ ತೆರವುಗೊಳಿಸಲು ಕ್ರಮವಹಿಸುವಂತೆ ಗ್ರಾಮಸ್ಥರು ಹಾಗೂ ಶಿಕ್ಷಕರು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿಕೊಂಡರು.
ಇಳಕಲ್ಲ ತಾಲೂಕಿನ ಬಲಕುಂದಿ ಗ್ರಾಮದ ಘಟನೆಯ ಹಿನ್ನಲೆಯಲ್ಲಿ ಸದರಿ ಶಾಲೆಯ ಸ್ಥಳ ಪರಿಶೀಲನೆಯಲ್ಲಿ ಕಂಡುಬಂದಿರುವ ಅಂಶಗಳ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಸರಕಾರಿ ಶಾಲೆಗಳಲ್ಲಿ ಕೂಡಲೇ ನಿಯಮಾನುಸಾರ ಪರಿಶೀಲಿಸಿ ಮುಂಜಾಗ್ರತವಾಗಿ ಕೈಗೊಳ್ಳಬಹುದಾದ ಕ್ರಮಗಳನ್ನು ಕೈಗೊಂಡು ಶಾಲೆವಾರು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು. ಭೇಟಿ ವೇಳೆಯಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಇದ್ದರು.