ಬಾಗಲಕೋಟೆ,ಅ,೦೧ : ಜಿಲ್ಲೆಯಲ್ಲಿ ಆಗಸ್ಟ ೨ ರಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇರ ನೇಮಕಾತಿಯ ಲಿಖಿತ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಸುಗಮ, ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಎಲ್ಲ ರೀತಿಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪೊಲೀಸ್ ನೇಮಕಾತಿಗೆ ಲಿಖಿತ ಪರೀಕ್ಷೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲಿಖಿತ ಪರೀಕ್ಷೆಗೆ ಒಟ್ಟು ೨೭ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಾಗಲಕೋಟೆ ನಗರದಲ್ಲಿ ೧೮ ಪರೀಕ್ಷಾ ಕೇಂದ್ರಗಳಲ್ಲಿ ೮೧೯೩ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದರೆ, ಜಮಖಂಡಿ ನಗರದಲ್ಲಿ ಸ್ಥಾಪಿಸಲಾದ ೯ ಪರೀಕ್ಷಾ ಕೇಂದ್ರಗಳಲ್ಲಿ ೪೭೦೬ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ ಒಟ್ಟು ೧೨೮೯೯ ಅಭ್ಯರ್ಥಿಗಳು ಇದ್ದಾರೆಂದು ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಮೂಲಸೌಕರ್ಯ, ಅಭ್ಯರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಮಪರ್ಕವಾಗಿ ಕಲ್ಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು. ಅಭ್ಯರ್ಥಿಗಳ ಪರಿಶೀಲನೆ, ಪ್ರವೇಶ ವ್ಯವಸ್ಥೆ, ಸಿಸಿಟಿವಿ ನಿಗಾ ಹಾಗೂ ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿ ಹೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಸರಬರಾಜು ಕಲ್ಪಿಸಲಿ ತಿಳಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ವ್ಯವಸ್ಥೆ, ಜಾಮರ್ ಅಳವಡಿಕೆ, ಅಭ್ಯರ್ಥಿಗಳ ಫ್ರಿಸ್ಕಿಂಗ್, ಕ್ಯೂಆರ್ ಕೋಡ ಆಧಾರಿತ ಗುರುತು ಪರಿಶೀಲನೆ, ವಸ್ತ್ರಸಂಹಿತೆ ಕಟ್ಟುನಿಟ್ಟಾಗಿ ಅನುಷ್ಠಾನ, ಪೊಲೀಸ್ ಬಂದೋಬಸ್ತಗಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಝರಾಕ್ಸ ಕೇಂದ್ರಗಳು, ಸೈಬರ್ ಸೆಂಟರ್ ಹಾಗೂ ಇತರೆ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾವಹಿಸಲು ಹಾಗೂ ಅಗತ್ಯವಿದ್ದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ರ ಕಲಂ ೧೬೩ ರಡಿ ಹೊರಡಿಸಲಾದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಕಾಂಬಳೆ, ಕೆ.ಎಸ್.ಆರ್.ಟಿ.ಸಿಯ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಎನ್.ಟಿ.ಪಾಟೀಲ ಸೇರಿದಂತೆ ಪರೀಕ್ಷಾ ಮುಖ್ಯ ಅಧೀಕ್ಷಕರು, ಜಾಗೃತದ ದಳದವರು, ಮಾರ್ಗಾಧಿಕಾರಿಗಳು ಉಪಸ್ಥಿತರಿದ್ದರು.
ಪರೀಕ್ಷೆಯ ವಸ್ತ್ರ ಸಂಹಿತೆ : ಪರೀಕ್ಷೆಯಲ್ಲಿ ಪುರುಷರು ಧರಿಸುವ ಜನಿವಾರ, ಶಿವದಾರ, ಉಡದಾರ, ತಾಯತ, ರುದ್ರಾಕ್ಷಿ, ಕೈಗೆ ಕಟ್ಟುವ ಧಾರ್ಮಿಕ ಕ್ಷೇತ್ರದ ದಾರಗಳು, ಹಾಗೂ ಮಹಿಳೆಯರು ಧರಿಸುವ ಮಾಂಗಲ್ಯ ಸರ, ಕೈಬಳೆಗಳು, ಮೂಗತಿ, ಕಾಲುಂಗುರ, ಕಾಲುಗೆಜ್ಜೆ, ಕುಂಕುಮ, ಹಣೆಬಟ್ಟು, ಉಂಗುರ ಧರಿಸಿಕೊಂಡು ಬರಬಹುದು. ಆದರೆ ತಪಾಸಣೆಗೆ ಒಳಪಡಿಸಬೇಕು. ಕೆಲವು ಸಮುದಾಯದ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಇಚ್ಚಿಸಿದಲ್ಲಿ ಪರೀಕ್ಷಾ ಆರಂಭಕ್ಕೆ ೨.೩೦ ಗಂಟೆ ಮೊದಲು ಪರೀಕ್ಷಾ ಕೇಂದ್ರದ ವಸ್ತ್ರ ಸಂಹಿತೆ ಅಧಿಕಾರಿ ಮುಂದೆ ಹಾಜರಾಗಬೇಕು ಎಂದರು.
ಪರೀಕ್ಷೆಯಲ್ಲಿ ನಿಷೇಧಿತ ವಸ್ತುಗಳು : ಎಲೆಕ್ಟ್ರಾನಿಕ್ಸ್ ವಸ್ತುಗಳಾದ ಮೊಬೈಲ್ಫೋನ್, ಬ್ಲೂಟೂತ್, ಇಯರ್ಫೋನ್, ಮೈಕ್ರೊಫೋನ್, ಪೇಜರ್, ಮೈಕ್ರೊಚಿಪ್, ಕ್ಯಾಮರಾ, ಬ್ಲೂಟೂತ್ ಸಾಧನ, ಪೆನ್ ಡ್ರೈವ್, ಎಲೆಕ್ಟ್ರಾನಿಕ್ ಪೆನ್/ಸ್ಕ್ಯಾನರ್, ಕೈಗಡಿಯಾರ, ಸ್ಮಾರ್ಟ ವಾಚ್, ಆಧುನಿಕಸಂವಹನಾ ಸಾಧನಗಳು, ಆಹಾರ ಪಾನೀಯಗಳಾದ ತೆರೆದಿರುವ ಅಥವಾ ಪ್ಯಾಕ್ ಮಾಡಲಾದ ಯಾವುದೇ ಆಹಾರ ಪದಾರ್ಥಗಳು, ನೀರಿನ ಬಾಟಲ್, ಪಾನೀಯ ಬಾಟಲ್ಗಳು, ಬರೆದಿಟ್ಟಿಕೊಂಡಿರುವ, ಪ್ರಿಂಟ್ ಇರುವ ಚೀಟಿಗಳು, ಪುಸ್ತಕಗಳು, ಜಾಮಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಪ್ಲಾಸ್ಟಿಕ್ ಪೌಚ್, ಕ್ಯಾಲ್ಕುಲೇಟರ್, ಸ್ಕೇಲ್, ಬರೆಯುವ ಪೇಪರ್, ಎರೇಸರ್, ಲಾಗ್ ಟೇಬಲ್ ಇತ್ಯಾದಿ ಬರಹಗಳಿರುವ ವಸ್ತುಗಳು ಹಾಗೂ ಇತರೆ ಶೂಗಳು, ಬೂಟ್ಸ್, ಕ್ಯಾಪ್, ಕಿವಿ, ತಲೆ ಮತ್ತು ಮುಖ ಮುಚ್ಚುವಂತಹ ಯಾವುದೇ ಉಡುಪುಗಳು, ಬ್ಯಾಗ್, ಪರ್ಸು, ಹೆಚ್ಚು ಜೆಬುಗಳಿರುವ ಜೀನ್ಸ್ ಪ್ಯಾಂಟ ಹಾಕಿಕೊಂಡು ಬರುವುದನ್ನು ನಿಷೇಧಿಸಲಾಗಿದೆ ಎಂದರು.
ಪರೀಕ್ಷಾರ್ಥಿಗಳಿಗೆ ಬಸ್ಗಳ ವ್ಯವಸ್ಥೆ : ಪರೀಕ್ಷೆಗಳು ಬಾಗಲಕೋಟೆ ಹಾಗೂ ಜಮಖಂಡಿ ನಗರಗಳಲ್ಲಿ ನಡೆಯಲಿದ್ದು, ಪರೀಕ್ಷಾ ದಿನದಂದು ಅಭ್ಯರ್ಥಿಗಳ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ ವತಿಯಿಂದ ಅಗತ್ಯ ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ತಾಲೂಕಾ ಬಸ್ ನಿಲ್ದಾಣಗಳಿಂದ ಬಾಗಲಕೋಟೆ ಮತ್ತು ಜಮಖಂಡಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಬಾಗಲಕೋಟೆ (೭೭೬೦೯೯೧೭೭೫), ಬಾದಾಮಿ (೭೭೬೦೯೯೧೭೭೬), ಜಮಖಂಡಿ (೭೭೬೦೯೯೧೭೭೮), ಇಳಕಲ್ಲ (೭೭೬೦೯೯೧೭೭೭), ಬೀಳಗಿ (೭೭೬೦೯೯೧೭೮೦), ಮುಧೋಳ (೭೭೬೦೯೯೧೭೭೯), ಹುನಗುಂದ (೯೬೦೬೦೬೮೬೧೧) ಹಾಗೂ ಗುಳೇದಗುಡ್ಡ (೭೭೬೦೯೯೧೭೮೧) ಇವರನ್ನು ಸಂಪರ್ಕಿಸಬಹುದಾಗಿದೆ.