ವಿಜಯಪುರ, ಜು. 20: ಫಿಸಿಯೋಥೆರಪಿ ಉಪಕರಣಗಳು ರೋಗಿಗಳಿಗೆ ಗುಣಮಟ್ಟದ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲು ಹಾಗೂ ರೋಗಿಗಳಿಗೆ ಪುನರ್ವಸತಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಲಿವೆ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಹೇಳಿದರು.
ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ಜಿಲ್ಲಾ ಆಸ್ಪತ್ರೆಗೆ ಮಂಜೂರಾದ ನೂತನ ಫಿಸಿಯೋಥೆರಪಿ ಉಪಕರಣಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯು, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ ಫಿಸಿಯೋಥೆರಪಿ ಉಪಕರಣಗಳನ್ನು ಮೆದುಳಿನ ಪಾರ್ಶ್ವವಾಯು, ತಲೆಗಾಯ, ಪಾರ್ಕಿನ್ಸನ್ ಕಾಯಿಲೆ, ಇತರೆ ನರ ಸಂಬಂಧಿತ ಕಾಯಿಲೆಗಳು ಹಾಗೂ ಇತರ ನರವೈದ್ಯಕೀಯ ಸಮಸ್ಯೆಗಳಿಂದ ಬಳಲುವ ರೋಗಿಗಳಿಗೆ ಈ ಫಿಸಿಯೋಥೆರಪಿ ಉಪಕರಣಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಅರ್ಚನಾ ಕುಲಕರ್ಣಿ ಮಾತನಾಡಿ, ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮಾರ್ಗದರ್ಶನದಿಂದ ಈ ಉಪಕರಣಗಳನ್ನು ನೀಡಿದ ಬ್ಯಾಂಕ್ ವ್ಯವಸ್ಥಾಪಕರಿಗೆ ಹಾಗೂ ಬ್ಯಾಂಕ್ ಸಿಬ್ಬಂದಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ ಅವರು, ಕರ್ನಾಟಕ ಬ್ರೇನ್ ಹೆಲ್ತ್ ಇನಿಷಿಯೇಟಿವ್ನ ಉದ್ದೇಶವಾದ ಮೆದುಳಿನ ಆರೋಗ್ಯ ಸೇವೆಗಳು ಜನಸಾಮಾನ್ಯರಿಗೆ ಸುಲಭವಾಗಲಿ ಎಂದು ಆಶಿಸಿದರು.
ಮೆದುಳು ಆರೋಗ್ಯ ವಿಭಾಗದಿಂದ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾ ಸಂಯೋಜಕರಾದ ಆನಂದ ರಾಠೋಡ ಹಾಗೂ ಕ್ಲಿನಿಕಲ್ ಸೈಕೋಲಾಜಿಸ್ಟ್ ನಬೀಸಾಬ ಜೈನಾಪುರ ಅವರು, ತಲೆನೋವು, ಅಪಸ್ಮಾರ, ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಹಾಗೂ ಇತರೆ ನರರೋಗ ಸಂಬಂಧಿತ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು. ಟೆಲಿ-ನ್ಯೂರಾಲಜಿ, ಟೆಲಿ-ರಿಹ್ಯಾಬಿಲಿಟೇಶನ್ ಫಿಸಿಯೋಥೆರಪಿ ಸೇವೆಗಳ ಲಭ್ಯತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಜಿಲ್ಲಾಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ ಡಾ. ಮಹೇಶ ಮೊರೆ, ಉಜ್ಜೀವನ ಸ್ಮಾಲ್ ಫೈನಾನ್ಸ್ ಬ್ಯಾಂಕಿನ ವ್ಯವಸ್ಥಾಪಕರಾದ ಆನಂದ ಜೋಗೂರ, ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿಗಳು, ಮೆದುಳು ಆರೋಗ್ಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಫಿಸಿಯೋಥೆರಪಿಸ್ಟ್ ಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಹಾಯಕ ಮಲೇರಿಯಾ ಅಧಿಕಾರಿ ವಿ. ಎಸ್. ಬಂದಿ ನಿರೂಪಿಸಿ, ವಂದಿಸಿದರು.