ಸಂಕೇಶ್ವರ: ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವಿದ್ದರೆ ಐಎಎಸ್ನಂತಹ ಉನ್ನತ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 53ನೇ ಹಾಗೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಕಿರಣ ಕಮತೆ ಹೇಳಿದರು.
ಪಟ್ಟಣದ ಎಸ್ಡಿವ್ಹಿಎಸ್ ಸಂಘದ ಎಸ್. ಎಸ್. ಆರ್ಟ್ಸ್ ಮತ್ತು ಟಿ. ಪಿ. ಸೈನ್ಸ್ ಕಾಲೇಜು, ಎಲ್. ಕೆ. ಖೋತ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಬಿಸಿಎ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಗೌರವ ಸ್ವೀಕರಿಸಿ ಮಾತನಾಡಿದರು.
ಯಶಸ್ಸು ಎಂಬುದು ರಾತ್ರೋರಾತ್ರಿ ಬರುವುದಿಲ್ಲ. ಆರಂಭದಲ್ಲಿ ಎದುರಾದ ಸರಣಿ ವಿಫಲತೆಗಳು ನನ್ನನ್ನು ಕುಗ್ಗಿಸುವ ಬದಲಾಗಿ, ನನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಅನುಕೂಲವಾದವು. ನಿರಂತರ ಆರು ವರ್ಷಗಳ ಅಡೆತಡೆಯಿಲ್ಲದ ಅಭ್ಯಾಸ ಹಾಗೂ ಕುಟುಂಬದವರು ನೀಡಿದ ಬೆಂಬಲ ಈ ಸಾಧನೆಯ ಹಿಂದಿನ ಶಕ್ತಿಯಾಗಿದೆ. ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ, ದೇಶದ ಉನ್ನತ ಹುದ್ದೆಗಳನ್ನು ಏರಲು ಶಿಸ್ತುಬದ್ಧ ಅಧ್ಯಯನ ಹಾಗೂ ದೃಢ ಸಂಕಲ್ಪ ಅಗತ್ಯ. ಕಿರಣ್ ಕಮತೆ ಅವರಂತಹ ಸಾಧಕರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಇವರಿಂದ ಪ್ರೇರಣೆ ಪಡೆದು ವಿದ್ಯಾರ್ಥಿಗಳು ಸಮಾಜಮುಖಿ ಸೇವೆಗೆ ಮುಂದಾಗಬೇಕು ಎಂದರು.
ಸಂಘದ ನಿರ್ದೇಶಕ ನ್ಯಾ. ಆರ್. ಬಿ. ಪಾಟೀಲ ಮಾತನಾಡಿ, ಶಿಕ್ಷಣದ ಮೂಲಕ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ವಿದ್ಯಾರ್ಥಿಗಳು ಸಮರ್ಪಣಾಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯದರ್ಶಿ ಜಿ. ಸಿ. ಕೋಟಗಿ ಮಾತನಾಡಿ, ಸಂಘವು ಮೊದಲಿನಿಂದಲೂ ಸಾಧಕರನ್ನು ಗೌರವಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೆ. ಸಿ. ಶಿರಕೋಳಿ, ಆಡಳಿತಾಧಿಕಾರಿ ಡಾ. ಬಿ. ಎ. ಪೂಜಾರಿ, ಪ್ರಾಚಾರ್ಯೆ ಡಾ. ಎಸ್. ಐ. ಮಡಿವಾಳಪ್ಪಗೋಳ, ಪ್ರಾಚಾರ್ಯ ಬಿ. ಐ. ಹೆಬ್ಬಾಳಿ, ಕೀರ್ತಿ ಕಮತೆ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
