ನೇಸರಗಿ. ಇಲ್ಲಿನ ಶ್ರೀ ಗಾಳೇಶ್ವರ ಮಠದ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ನೇಸರಗಿ - ಮಲ್ಲಾಪೂರ ಇದರ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯದಲ್ಲಿರುವ "ಅಸಿ ಮಸಿ ಕೃಷಿ" ಪಾಠದ ಅನುಭವಾತ್ಮಕ ಕಲಿಕೆಯ ಅಂಗವಾಗಿ ಹತ್ತಿರದ ಮತ್ತಿಕೊಪ್ಪ ಗ್ರಾಮದ ಕೆ ಎಲ್ ಇ *ಕೃಷಿ ವಿಜ್ಞಾನ ಕೇಂದ್ರಕ್ಕೆ* ಶೈಕ್ಷಣಿಕ ಭೇಟಿ ಏರ್ಪಡಿಸಲಾಯಿತು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳಾದ ವಾರದ ಮತ್ತು ವಿನೋದ ಅವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಮತ್ತು ಕೃಷಿಯ ಮಹತ್ವದ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.
ಅಲ್ಲದೆ, ತಮ್ಮ ಸಂಶೋಧನಾ ಕೇಂದ್ರದಲ್ಲಿರುವ ವಿವಿಧ ದ್ವಿದಳ ಧಾನ್ಯಗಳ ತಳಿಗಳು, ಅವುಗಳ ವೈಶಿಷ್ಟ್ಯಗಳು ಹಾಗೂ ಆಧುನಿಕ ಕೃಷಿ ಉಪಕರಣಗಳು ಮತ್ತು ಯಂತ್ರೋಪಕರಣಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಮಣ್ಣಿನ ಸಂರಕ್ಷಣೆ, ಮಣ್ಣಿನ ಫಲವತ್ತತೆ ಕಾಪಾಡುವ ವಿಧಾನಗಳು, ಮಣ್ಣಿನ ಪರೀಕ್ಷೆ ಮತ್ತು ನೀರಿನ ಪರೀಕ್ಷೆಯ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಇದರಿಂದ ವೈಜ್ಞಾನಿಕ ಕೃಷಿಯ ಮಹತ್ವವನ್ನು ವಿದ್ಯಾರ್ಥಿಗಳು ನೇರವಾಗಿ ಅರಿತುಕೊಂಡರು.
ಸಾವಯವ ಕೃಷಿಯ ಕುರಿತು ಪಂಚಗವ್ಯ ಹಾಗೂ ಜೀವಾಮೃತ ತಯಾರಿಸುವ ವಿಧಾನಗಳನ್ನು ವಿವರಿಸಿ, ಅವುಗಳ ಉಪಯೋಗ ಮತ್ತು ಪ್ರಯೋಜನಗಳನ್ನು ತಿಳಿಸಿದರು.
ಇದರ ಜೊತೆಗೆ ತೋಟಗಾರಿಕೆ, ಹೈನುಗಾರಿಕೆ, ಕೃಷಿ ಹೊಂಡ ನಿರ್ಮಾಣ, ನೀರಿನ ಸಂರಕ್ಷಣೆ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಕುರಿತು ಮಾಹಿತಿ ನೀಡಿದರು.
ಈ ಶೈಕ್ಷಣಿಕ ಭೇಟಿಯು ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ, ಅರಿವು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಅತ್ಯಂತ ಉಪಯುಕ್ತವಾಯಿತು.
ಈ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಡಾ. ಮಂಜುನಾಥ ಚೌರಡ್ಡಿ, ಡಾ. ಎಸ್ ಎಸ್ ಹಿರೇಮಠ, ಡಾ. ಬಿ ಡಿ ಬಿರಾದಾರ, ಶಾಲೆಯ ಮುಖ್ಯ ಶಿಕ್ಷಕರಾದ ಶರಣು ಮಾದಾಪುರಮಠ ಹಾಗೂ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.